ಮಾಲಿನಿ ಪಾರ್ಥಸಾರಥಿ ಒಬ್ಬ ಭಾರತೀಯ ಪತ್ರಕರ್ತೆಯಾಗಿದ್ದು, ಅವರು ೨೦೧೫-೨೦೧೬ ಸಮಯದಲ್ಲಿ ದಿ ಹಿಂದೂ ಪತ್ರಿಕೆಯ ಸಂಪಾದಕರಾಗಿದ್ದರು. ೨೦೨೦ ರಿಂದ ೨೦೨೩ ರವರೆಗೆ ಅವರು ಪ್ರಕಾಶನ ಕಂಪನಿಯಾದ ಟಿಎಚ್‌ಜಿ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌ನ (ಹಿಂದೆ ಕಸ್ತೂರಿ & ಸನ್ಸ್ ಲಿಮಿಟೆಡ್ ಭಾಗವಾಗಿತ್ತು) ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. == ಕುಟುಂಬ == ಮಾಲಿನಿ ಪಾರ್ಥಸಾರಥಿ ಅವರು ಕಸ್ತೂರಿ ಶ್ರೀನಿವಾಸನ್ ಅವರ ಮೊಮ್ಮಗಳಾದ ಶ್ರೀನಿವಾಸನ್ ಪಾರ್ಥಸಾರಥಿಯವರ ಪುತ್ರಿ ಮತ್ತು ದಿ ಹಿಂದೂ ಪತ್ರಿಕೆಯ ಮಾಲೀಕರಾಗಿದ್ದ ಕಸ್ತೂರಿ ಕುಟುಂಬದ ಹಿರಿಯ ಪುತ್ರ ಎಸ್. ಕಸ್ತೂರಿ ರಂಗ ಅಯ್ಯಂಗಾರ್ ಅವರ ಮರಿಮೊಮ್ಮಗಳು. == ಶಿಕ್ಷಣ == ೨೦೦೮ ರಲ್ಲಿ ಪಾರ್ಥಸಾರಥಿಯು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ರಾಜಕೀಯ ಅಧ್ಯಯನ ಕೇಂದ್ರದಿಂದ ಪಿಎಚ್‌ಡಿ ಮುಗಿಸಿದರು. ಅವರು ಚೆನ್ನೈನ ಸ್ಟೆಲ್ಲಾ ಮಾರಿಸ್ ಕಾಲೇಜಿನಿಂದ ಇತಿಹಾಸದಲ್ಲಿ ಬಿ.ಎ ಹಾಗೂ ಕೊಲಂಬಿಯಾ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಜರ್ನಲಿಸಂನಿಂದ ಪತ್ರಿಕೋದ್ಯಮದಲ್ಲಿ ಎಂ.ಎಸ್ ಪದವಿಯನ್ನು ಪಡೆದಿದ್ದಾರೆ. == ವೃತ್ತಿಜೀವನ == ಅವರು ದಿ ಹಿಂದೂ ಪತ್ರಿಕೆಯ ವರದಿ, ಮತ್ತು ಸಂಪಾದಕೀಯ ವಿಭಾಗಗಳಲ್ಲಿ ಕಾರ್ಯವನ್ನು ನಿರ್ವಹಿಸಿದ್ದಾರೆ. ೨೦ ಜೂನ್ ೨೦೧೧ ರವರೆಗೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿ ಸೇವೆ ಸಲ್ಲಿಸಿದರು. ಪಾರ್ಥಸಾರಥಿ ೨೦೧೩ರ ಅಕ್ಟೋಬರ್ ೨೧ರಂದು ಈ ಪತ್ರಿಕೆಯ ಸಂಪಾದಕರಾದರು . ಅವರು ದಿ ಹಿಂದೂ ಸೆಂಟರ್ ಫಾರ್ ಪಾಲಿಟಿಕ್ಸ್ ಅಂಡ್ ಪಬ್ಲಿಕ್ ಪಾಲಿಸಿಯನ್ನು ಸ್ಥಾಪಿಸಿದರು. ಮಾಲಿನಿ ಪಾರ್ಥಸಾರಥಿಯವರು ಫೆಬ್ರವರಿ ೧, ೨೦೧೫ ರಂದು ದಿ ಹಿಂದೂ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡರು.ಆದರೆ ಹನ್ನೊಂದು ತಿಂಗಳ ನಂತರ ಸಂಪಾದಕ ವೃತ್ತಿಯಿಂದ ಕೆಳಗಿಳಿದರು. ಅವರು ತಮ್ಮ ಸಹೋದ್ಯೋಗಿಗಳಿಗೆ ಕಳಿಸಿದ ಇಮೇಲ್‌ನಲ್ಲಿ, ಸಂಪಾದಕರಾಗಿ ತಮ್ಮ ಕಾರ್ಯಕ್ಷಮತೆ ಕಡಿಮೆ ಇದ್ದದ್ದರಿಂದ ತಾವು ಇತರರ ಒತ್ತಾಯಕ್ಕಾಗಿ ರಾಜೀನಾಮೆ ನೀಡಬೇಕಾಗಿ ಬಂತು ಎಂದು ಹೇಳಿದರು. ಪತ್ರಿಕೆಯ ಸಂಪಾದಕರಾಗಿ ಪಾರ್ಥಸಾರಥಿಯವರ ಅಧಿಕಾರಾವಧಿಯು ಕಡಿಮೆಯಿತ್ತು. ಮಾಲಿನಿ ಪಾರ್ಥಸಾರಥಿಯನ್ನು ೨೦೨೦ರ ಜುಲೈ ೧೫ರಂದು ದಿ ಹಿಂದೂ ಗ್ರೂಪ್ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯ ಅಧ್ಯಕ್ಷರಾಗಿ ನೇಮಿಸಲಾಯಿತು. ೭೫ ನೇ ವಯಸ್ಸನ್ನು ತಲುಪಿದ ನಂತರ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಎನ್. ರಾಮ್ ಅವರ ಉತ್ತರಾಧಿಕಾರಿಯಾಗಿ ಪಾರ್ಥಸಾರಥಿ ನೇಮಕರಾದರು. ೫ ಜೂನ್ ೨೦೨೩ ರಂದು, ಅವರು ದಿ ಹಿಂದೂ ಗ್ರೂಪ್ ಪಬ್ಲಿಷಿಂಗ್ ಪ್ರೈವೇಟ್ ಲಿಮಿಟೆಡ್‌ನ ಮಂಡಳಿಗೆ ರಾಜೀನಾಮೆ ನೀಡಿದರು. ಕೊಲಂಬಿಯಾ ಜರ್ನಲಿಸಂ ಸ್ಕೂಲ್ ಆಕೆಯನ್ನು ೨೦೨೨ರ ಅಲುಮ್ನಿ ಪ್ರಶಸ್ತಿಗಳನ್ನು ಸ್ವೀಕರಿಸುವವರಲ್ಲಿ ಒಬ್ಬರೆಂದು ಹೆಸರಿಸಿದೆ. ಪತ್ರಿಕಾ ಶಾಲೆಯಲ್ಲಿ ಉನ್ನತ ಮಟ್ಟದ ಪತ್ರಿಕೋದ್ಯಮಕ್ಕೆ ಅತ್ಯುತ್ತಮ ಉದಾಹರಣೆಯಾಗುವ ಪದವೀಧರರಿಗೆ ಪ್ರತಿ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಶಾಲೆಯು ಹೇಳಿಕೆಯಲ್ಲಿ ತಿಳಿಸಿದೆ. ಅವರು ೨೮ ನವೆಂಬರ್ ೨೦೧೫ ರಂದು ಪತ್ರಿಕೆಯ ಸಂಪಾದಕರಾಗಿದ್ದ ಅವಧಿಯಲ್ಲಿ ದಿ ಹಿಂದೂ ಪತ್ರಿಕೆಯ ಮುಂಬೈ ಆವೃತ್ತಿಯನ್ನು ಬಿಡುಗಡೆ ಮಾಡಿದರು. ೨೦೦೪ ರಿಂದ ಅವರು ಆರೋವಿಲ್ಲೆ ಫೌಂಡೇಶನ್ನ ಆಡಳಿತ ಮಂಡಳಿಯ ಸದಸ್ಯರಾಗಿದ್ದಾರೆ. == ಉಲ್ಲೇಖಗಳು ==